ಮಂಗಳೂರು ಜ. 29 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ನೂತನ ಕೃಷ್ಣ ವರ್ಣ ಚಿತ್ರ ಚಾವಡಿ ಚಿತ್ರಕಲಾ ಕೊಠಡಿಯನ್ನು ಇಂದು ಶಕ್ತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸಗುಣಾ ಸಿ. ನಾೖಕ್ ಉದ್ಘಾಟಿಸಿದರು. ಇವರು ಶ್ರೀ ಕೃಷ್ಣನಿಗೆ ಪುಷ್ಪಾರ್ಚನೆ ಮಾಡಿದ ನಂತರ ಕೃಷ್ಣ ವರ್ಣದ ನಾಮ ಫಲಕವನ್ನು ಅನಾವರಣಗೊಳಿಸಿದರು. ತಾವು ಸ್ವತಃ ಚಿತ್ರಕಾರರಾಗಿರುವುದರಿಂದ ಕೊಠಡಿಯಲ್ಲಿ ಚಿತ್ರ ಬಿಡಿಸಿದ ನಂತರ ದೀಪ ಬೆಳಗಿಸಿ ಚಾಲನೆ ನೀಡಿದರು.
ಉದ್ಘಾಟನಾ ಭಾಷಣದಲ್ಲಿ ಚಿತ್ರಕಲೆಯು ವಿದ್ಯಾರ್ಥಿ ಜೀವನದಲ್ಲಿ ಕಲಿಯಲೇಬೇಕಾದ ಕಲೆಯಾಗಿರುವುದರಿಂದ ಇದನ್ನು ಪ್ರೋತ್ಸಾಹಿಸಬೇಕೆಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಮಾತನಾಡಿ ಕೃಷ್ಣ ವರ್ಣ ಒಂದು ಅದ್ಭುತವಾದ ಚಿತ್ರ ಚಾವಡಿ. ಇಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಬಲಪಡಿಸಿಕೊಳ್ಳಲು ಉತ್ತಮವಾದ ಅವಕಾಶವಾಗಲಿದೆ. ಇದರ ಸದುಪಯೋಗವನ್ನು ಪಡೆದರು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವಂತಾಗಬೇಕು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಮಾತನಾಡಿ ನಮ್ಮ ಸಂಸ್ಥೆಯ ಬಹು ನಿರೀಕ್ಷೆಯ ಕನಸು ಇಂದು ನನಸಾಗಿದೆ. ಈ ಮೂಲಕ ಇದು ಇಂದು ಲೋಕಾರ್ಪಣೆಗೊಂಡಿದೆ. ಚಿತ್ರ ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೆಲ್ಲರೂ ತಮ್ಮ ಪ್ರತಿಭೆಯನ್ನು ಉನ್ನತ ಮಟ್ಟದಲ್ಲಿ ಅನಾವರಣಗೊಳಿಸುವಂತಾಗಬೇಕು. ಈ ಮೂಲಕ ಶಾಲೆಗೆ ಒಳ್ಳೆಯ ಹೆಸರನ್ನು ತರುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕರಾದ ಶರಣಪ್ಪ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಾಲೆಯ ಚಿತ್ರಕಲಾ ಶಿಕ್ಷಕರಾದ ಪೂರ್ಣೇಶ್ ಧನ್ಯವಾದ ಸಮರ್ಪಿಸಿದರು.