ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಹೈಕೋರ್ಟ್ ವಕೀಲರಾದ ಡಾ. ಅರುಣ್ ಶ್ಯಾಮ್ ಮತ್ತು ಎನ್ಐಟಿಕೆ ಸುರತ್ಕಲ್ನ ಪ್ರಾಧ್ಯಾಪಕರಾದ ಡಾ. ಉದಯಕುಮಾರ್ ಆಗಮಿಸಿದರು. ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಚಂಡೆ ವಾದನದೊಂದಿಗೆ ಅತಿಥಿಗಳನ್ನು ಆರತಿ ಮಾಡಿ ತಿಲಕವನ್ನು ಇಟ್ಟು ಭಾರತೀಯ ಸಂಸ್ಕೃತಿಯಲ್ಲಿ ಸ್ವಾಗತಿಸಲಾಯಿತು. ನಂತರ ಅತಿಥಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ನಂತರ ತೆಂಗಿನ ಕೊಂಬನ್ನು ಅರಳಿಸುವುದರ ಮೂಲಕ ವಾರ್ಷಿಕೋತ್ಸವಕ್ಕೆ ವೇದಿಕೆಯಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವರ್ಷಪೂರ್ತಿ ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ, ಕ್ರೀಡೆ, ಸಾಂಸ್ಕೃತಿಕ ಮತ್ತು ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎನ್ಐಟಿಕೆ ಸುರತ್ಕಲ್ನ ಇಲೆಕ್ಟ್ರಿಕಲ್ ವಿಭಾಗದ ಪ್ರಾಧ್ಯಾಪಕರಾದ ಡಾ. ಉದಯಕುಮಾರ್ ವೈ ಮಾತನಾಡಿ ಈ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆ ಇರುವ ಸಂಸ್ಕಾರದ ಭಾವನೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಶಾಲೆಯ ಪ್ರಾರ್ಥನೆಯ ಕುರಿತಂತೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ರಾಜ್ಯದ 31 ಜಿಲ್ಲೆಗಳಿಂದ ಶಿಕ್ಷಣಗೋಸ್ಕರ ಬಂದಿರುವ ವಿದ್ಯಾರ್ಥಿಗಳು ಪುಣ್ಯವಂತರು. ಇಲ್ಲಿ ಸಿಗುವ ಸಂಸ್ಕಾರವು ವಿದೇಶ ಶಾಲೆಗಳಲ್ಲಿ ದೊಡ್ಡ ಪ್ರಮಾಣದ ಹಣಕ್ಕೆ ಮಾರಟವಾಗುತ್ತದೆ. ಆದರೆ ಈ ಶಿಕ್ಷಣ ಸಂಸ್ಥೆಯು ಇಂತಹ ವಿಷಯವನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. ಎಲ್ಲಾ ಪೋಷಕರು ವಿದ್ಯಾರ್ಥಿಗಳಿಗೆ ಆಹಾರದ ವಿಷಯದಲ್ಲಿ ಜಾಗೃತೆಯನ್ನು ಮಾಡಬೇಕು. ಅವರು ಜಂಕ್ ಫುಡ್ಗೆ ಆಸಕ್ತಿ ತೋರಿಸುತ್ತಿದ್ದರೆ ಅದನ್ನು ನಾವು ತಿಳಿ ಹೇಳಿ ದೂರ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಷ್ಟಪಡಬೇಕಾಗುತ್ತದೆ. ಈ ಸಂಸ್ಥೆಯು ಶೈಕ್ಷಣಿಕ ವಾತಾವರಣವನ್ನು ಸಂಸ್ಕಾರಯುತವಾಗಿ ಸಿದ್ಧಗೊಳಿಸಿರುವುದು ಮಕ್ಕಳ ಭವಿಷ್ಯಕ್ಕೆ ಪೂರಕವಾಗಿದೆ ಎಂದು ಅವರು ಹೇಳಿದರು.
ಹೈಕೋರ್ಟ್ನ ವಕೀಲರಾದ ಡಾ.ಅರುಣ್ ಶ್ಯಾಮ್ ಮಾತನಾಡಿ ವಿದ್ಯಾರ್ಥಿಗಳಿಗೆ ಪೊಷಕರು ಒತ್ತಡವನ್ನು ಹಾಕಬಾರದು. ಅವರಿಗೆ ಅವರ ಜೀವನದಲ್ಲಿ ಓದಬೇಕಾದ ಆಸಕ್ತಿಯ ವಿಷಯವನ್ನು ಕಲಿಯಲು ಬಿಡಬೇಕೆಂದು ಹೇಳಿದರು. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದಾಗ ಮಾತ್ರ ಇಂತಹ ಒಳ್ಳೆಯ ಸಂಸ್ಕಾರಯುತ ವಿದ್ಯಾರ್ಥಿಗಳಾಗಿ ನಿರ್ಮಾಣವಾಗಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಶಕ್ತಿ ವಿದ್ಯಾಸಂಸ್ಥೆಯು ವಿದ್ಯಾ ಭಾರತಿ ಕರ್ನಾಟಕದ ಸಂಯೋಜನೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸ ಮಾಡುತ್ತಿದೆ. ಬೆಳಗಿನ ಪ್ರಾರ್ಥನೆಯ ಮೂಲಕ ಶಿಸ್ತು ಅಳವಡಿಸುವಂತೆ ಮಾಡಿದೆ. ಈಗಾಗಲೇ ಪಠ್ಯದ ಜೊತೆ ಹೆಚ್ಚುವರಿ ಸ್ಪರ್ಧಾತ್ಮಕ ವಿಷಯಗಳ ಭೋದನೆ, ಶಕ್ತಿ ಸನಾತನ-ಸಂಪದ, ಮೌಲ್ಯಾಧಾರಿತ ಶಿಕ್ಷಣದ ತರಗತಿಯನ್ನು ಅಳವಡಿಸಿರುವುದು ಮಕ್ಕಳ ಬೆಳವಣಿಗೆಗೆ ಪೂರಕ ವಾತವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಶಿಕ್ಷಕರು ತುಂಬಾ ಶ್ರಮವಹಿಸಿರುವುದು ಶಕ್ತಿ ವಿದ್ಯಾಸಂಸ್ಥೆ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವರದಿ ವಾಚನವನ್ನು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಮಾಡಿದರು. ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಉಪ ಪ್ರಾಂಶುಪಾಲರಾದ ದೀಪಕ್ ಕುಡ್ವ ಉಪಸ್ಥಿತರಿದ್ದರು. ಶಿಕ್ಷಕರಾದ ಶಿವರಾಜ್ರವರು ಸ್ವಾಗತಿಸಿ, ಶಿಕ್ಷಕಿಯಾದ ತಾರಾ ಸಾಲ್ಯಾನ್ರವರು ವಂದಿಸಿ, ಚೈತ್ರ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು.